Monthly Archives: ಏಪ್ರಿಲ್ 2009

ಕಾರಣವಿಲ್ಲದೇ ಇಷ್ಟವಾಗುವ ಅಮ್ಮನೂ, ಮಣಿಯೂ

ಸಾಮಾನ್ಯ

ಪುಸ್ತಕ ಎಂದರೆ ಮೂಗು ಮುರಿಯುವ ಮಂದಿಯೇ ಹೆಚ್ಚು. ಎಸ್.ಎಲ್.ಭೈರಪ್ಪ , ರವಿ ಬೆಳಗೆರೆ ಮತ್ತು ಯಂಡಮೂರಿ ವೀರೇಂದ್ರನಾಥರ(ಕನ್ನಡ ಭಾಷಾಂತರ) ಪುಸ್ತಕಗಳನ್ನು ಬಿಟ್ಟರೆ ಕನ್ನಡದಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುವ ಪುಸ್ತಕಗಳು ಮೂರು ಮತ್ತೊಂದು. ವಸುಧೇಂದ್ರನಂಥ ಜಾಣರು, ಅಂಕಿತದ ಪ್ರಕಾಶ್ ಕಂಬತ್ತಳ್ಳಿ ಸೇರಿದಂತೆ ಕೆಲವೇ ಕೆಲವರು ಪುಸ್ತಕೋದ್ಯಮದಲ್ಲಿ ಅಷ್ಟಿಷ್ಟು ಲಾಭ ಕಂಡವರು.

ಮತ್ತೊಂದು ಕಡೆ ಗ್ರಂಥಾಲಯ ಪ್ರಕಾಶಕರ ದಂಡು ಕನ್ನಡದಲ್ಲಿ ದೊಡ್ಡದಾಗಿಯೇ ಇದೆ. ಪುಸ್ತಕ ತರುವುದು, ಗ್ರಂಥಾಲಯಕ್ಕೆ ಅವುಗಳನ್ನು ಸೇರಿಸುವುದರಲ್ಲಿ ಇವರು ಪ್ರಖ್ಯಾತರು. ಪುಸ್ತಕವನ್ನು ಓದುಗರ ಕೈಗೆ ತಲುಪಿಸುವ ಅಪರೂಪದ ಪ್ರಯತ್ನಗಳು ಇತ್ತೀಚೆಗೆ ಕನ್ನಡದಲ್ಲಿ ನಿಧಾನವಾಗಿಯಾದರೂ ಆರಂಭಗೊಳ್ಳುತ್ತಿವೆ. ‘ಪುಸ್ತಕ ಮೂರು, ರೂಪಾಯಿ ನೂರು’ ಎನ್ನುವ ‘ಛಂದ’ದ ಚೆಂದದ ಪ್ರಯತ್ನಗಳನ್ನು ಇಲ್ಲಿ ಸ್ಮರಿಸಬೇಕು.

ಇಂದು(ಏ.೨೫) ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾದ ನನ್ನ ಸಹೋದ್ಯೋಗಿ ಮತ್ತು ಹಿರಿಯಣ್ಣನಂಥ ಎ.ಆರ್.ಮಣಿಕಾಂತರ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕ ಬಿಡುಗಡೆ ಸಮಾರಂಭದ ವಿವರಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಪುಸ್ತಕ ಪ್ರಕಾಶನಕ್ಕೆ ಗ್ಲಾಮರ್ ಟಚ್ ನೀಡಿದ ಈ ಕಾರ್‍ಯಕ್ರಮ ನನಗೆ ಎರಡು ಕಾರಣಗಳಿಗೆ ಮುಖ್ಯವೆನಿಸುತ್ತದೆ. ರವೀಂದ್ರ ಕಲಾಕ್ಷೇತ್ರ ಇಂಥದ್ದೊಂದು ಕಾರ್‍ಯಕ್ರಮದ ಸಲುವಾಗಿ ಹೌಸ್‌ಫುಲ್ ಆದ ಉದಾಹರಣೆ ನನ್ನ ಮಟ್ಟಿಗೆ ಹೊಸತು. ಅಕ್ಷರಶಃ ಕಲಾಕ್ಷೇತ್ರ ತುಂಬಿ ತುಳುಕುತ್ತಿತ್ತು. ಸೀಟುಗಳು ತುಂಬಿದ್ದ ಕಾರಣ, ಮಣಿ ಅಭಿಮಾನಿಗಳು ಮೂರು ಗಂಟೆಯ ಈ ಕಾರ್‍ಯಕ್ರಮವನ್ನು ನಿಂತೇ ಸವಿದರು. ಮಾನವ ಸಂಬಂಧಗಳನ್ನು ಬೆಸೆಯುವಂತಿರುವ ಇಂಥ ಪುಸ್ತಕಗಳನ್ನು ಓದಲು ಜನರ ಕಾತರ ಹೆಚ್ಚುತ್ತಿರುವುದನ್ನು ಇಲ್ಲಿ ಹೇಳಲೇ ಬೇಕು. ಇಂಥ ಪುಸ್ತಕಗಳ ಮೂಲಕವಾದರೂ ಕೆಟ್ಟುನಿಂತ ಬದುಕುಗಳು, ಕರಳು-ಬಳ್ಳಿ ನಂಟುಗಳು ಬಿಗಿಯಾದರೆ ಅದಕ್ಕಿಂತ ಸಂತೋಷ ಇನ್ನೇನಿದೆ.

ಈಗಿನ ಯುವ ಬರಹಗಾರರು ಲಂಕೇಶ್, ರವಿ ಬೆಳಗೆರೆ, ವಿಶ್ವೇಶ್ವರ ಭಟ್‌ರಂತೆಯೇ ಬರೆಯುತ್ತಾರೆ. ಆ ಪ್ರಭಾವಳಿಯಿಂದ ಹೊರಬಂದು ಸ್ವಂತಿಕೆ ಉಳಿಸಿಕೊಳ್ಳುವುದು ನಿಜಕ್ಕೂ ಕಷ್ಟ. ‘ಮಣಿಕಾಂತ್ ಅನುಕರಣೆಯಲ್ಲಿ ಫಟಿಂಗ. ನಾಗತಿಹಳ್ಳಿಯಂತೆ, ರವಿ ಬೆಳಗೆರೆಯಂತೆಯೇ ಬರೆಯುತ್ತಾನೆ’ ಎಂದು ವಿಕ ಸಂಪಾದಕ ವಿಶ್ವೇಶ್ವರ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಅದರಾಚೆಯ ಮಿತಿಯನ್ನು ಪ್ರೊ.ಕೃಷ್ಣೇ ಗೌಡ ಬಿಚ್ಚಿಟ್ಟರು.

‘ರವಿ ಬೆಳಗೆರೆಯಂತೆಯೇ ಬರೆಯುವುದು ಮಣಿಕಾಂತ್ ಪಾಲಿಗೆ ಇಂದು ಹೆಮ್ಮೆಯ ವಿಷಯ. ಆದರೆ ಹತ್ತು ವರ್ಷಗಳ ನಂತರ ಇದೇ ಅಭಿಪ್ರಾಯ ಮೂಡಿದರೆ, ಅದು ಅವರಿಗೆ ಅವಮಾನ’ -ಗೌಡರ ಈ ಮಾತನ್ನು, ಅಕ್ಷರ ಲೋಕ ಪ್ರವೇಶಿಸಿರುವ ಹೊಸ ಹುಡುಗರು ಪದೇಪದೆ ಮೆಲುಕು ಹಾಕಬೇಕು.

ವಸುಧೇಂದ್ರನ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಪುಸ್ತಕದ ಜನಪ್ರಿಯತೆಯ ಜಾಡಿನಲ್ಲಿಯೇ ಮಣಿ ಪುಸ್ತಕವೂ ಹೆಜ್ಜೆಹಾಕಿದೆ. ಅಮ್ಮನ ಬಗ್ಗೆ ಎಷ್ಟು ಬರೆದರು, ಯಾರು ಬರೆದರೂ ಚೆನ್ನಾಗಿಯೇ ಇರುತ್ತದೆ ಎಂಬುದು ನನ್ನ ಅಭಿಮತ. ಮಣಿಕಾಂತರ ಬರಹದ ಶೈಲಿ ಏನೇ ಇರಲಿ, ಅವರ ಜನಪ್ರಿಯತೆ ದೊಡ್ಡದು. ಅವರ ಜನಪ್ರಿಯತೆ ಹೆಚ್ಚಳಕ್ಕೆ ಅವರ ಬರಹಗಳ ಜತೆಗೆ ಅವರ ಮಾತೃ ಹೃದಯದ ಪಾತ್ರವೂ ದೊಡ್ಡದು. ಎಲ್ಲರನ್ನೂ ಪ್ರೀತಿಯಿಂದ ಸೆಳೆಯುವ ಅವರ ನೋಟದಲ್ಲಿ ಏನೋ ಆಪ್ತತೆ ಮತ್ತು ವಾತ್ಸಲ್ಯ ತುಂಬಿತುಳುಕುವಂತೆ ನನಗೆ ಭಾಸವಾಗುತ್ತದೆ.

ಪುಸ್ತಕ ಮತ್ತು ಲೇಖಕರಿಗೆ ಯಾವುದೇ ಸಂಬಂಧವಿಲ್ಲದ ಪ್ರಕಾಶ್ ರೈರನ್ನು ದೂರದ ಚೆನ್ನೈನಿಂದ ಕರೆಸಿದ ಔಚಿತ್ಯ ನನಗಂತೂ ಅರ್ಥವಾಗುತ್ತಿಲ್ಲ. ರವಿಬೆಳಗೆರೆ, ವಿಶ್ವೇಶ್ವರ ಭಟ್, ಕೃಷ್ಣೇಗೌಡ ವೇದಿಕೆ ಮೇಲಿದ್ದರು. ಹೀಗಾಗಿ ಮಾತಿಗಂತೂ ಭರವಿಲ್ಲ. ಮತ್ತೊಂದು ಕಡೆ ಉಪಾಸನಾ ಮೋಹನ್ ಮತ್ತು ಅವರ ತಂಡದ ಸುಗಮ ಸಂಗೀತ ಸಹ ಇತ್ತು. ಹೀಗಾಗಿ ಒಂದರ್ಥದಲ್ಲಿ ಪುಸ್ತಕ ಬಿಡುಗಡೆ ನೆಪದಲ್ಲಿ ಹಾಡು-ಹಾಸ್ಯ-ಹರಟೆಗಳು ಬೋನಸ್ ರೂಪದಲ್ಲಿ ಸಿಕ್ಕವು.

ಕೆಲವು ಬಿಡಿಬಿಡಿ ಚಿತ್ರಗಳು

ಬದುಕಿಗೆ ಬಣ್ಣ ಬಳಿಯಲು ಸೈಕಲ್ ತುಳಿಯುತ್ತಿದ್ದ ರೈಗೆ ಅವು ಕಷ್ಟದ ದಿನಗಳು. ಆಗ ಐಡೆಂಟಿಟಿಗಾಗಿ ಒತ್ತಾಡುತ್ತ, ರವೀಂದ್ರ ಕಲಾಕ್ಷೇತ್ರದ ಸುತ್ತ ಸುತ್ತುತ್ತಿದ್ದ ರೈನತ್ತ ಕತ್ತೆತ್ತಿ ನೋಡುವವರು ಇರಲಿಲ್ಲ. ಸಾಮಾನ್ಯರಲ್ಲಿ ಅವರು ಅಂದು ಸಾಮಾನ್ಯರು. ಅದರೆ ಇಂದು? ಇದೇ ಕಲಾಕ್ಷೇತ್ರದ ವೇದಿಕೆ ಮೇಲೆ ಅವರು ದೊಡ್ಡ ಸ್ಟಾರ್! ಹಿಂದೆ ಆಟೋಗ್ರಾಫ್‌ಗೆ ಕೈಚಾಚಿದ್ದ ಕೈ, ಇಂದು ಆಟೋಗ್ರಾಫ್ ಗೀಚುತ್ತಿತ್ತು! ಇದೇ ಬದುಕು!

‘ಮನೆಯಲ್ಲಿ ಮಾಸ್ಟರ್ ಬೆಡ್‌ರೂಂ, ಮಗನಿಗೆ ಸ್ಟಡಿ ರೂಂ ಎಲ್ಲವೂ ಇರುತ್ತದೆ. ಆದರೆ ಅಮ್ಮನಿಗೆ ಪ್ರತ್ಯೇಕ ರೂಂ ಕಟ್ಟುವ ಔದಾರ್ಯ ಎಷ್ಟು ಮಂದಿಗಿದೆ? ಮಕ್ಕಳಿಲ್ಲವೆಂದು ದತ್ತು ಸ್ವೀಕರಿಸುವ ಜನರು, ಅದೇ ರೀತಿ ಅಮ್ಮನನ್ನು ಏಕೆ ದತ್ತು ಸ್ವೀಕರಿಸಬಾರದು?’ ಎನ್ನುವ ಬೆಳಗೆರೆ ಮಾತು, ಹೃದಯದ ತಂತಿಗಳ ಮೀಟುವಂತಿತ್ತು.

‘ಮಣಿಕಾಂತ್‌ರ ಈ ಪುಸ್ತಕವನ್ನು ಓದುತ್ತ ಹೋದಂತೆ ತುಂಬಾ ಆಪ್ತವೆನಿಸುತ್ತದೆ. ಅವರ ಭಾಷೆಯಲ್ಲಿ ಸೊಗಸು ಮತು ಆತ್ಮೀಯತೆ ಮೇಳೈಸಿದ್ದು, ಇಲ್ಲಿನ ಲೇಖನ ಪ್ರೀತಿಯ ರೂಪಕಗಳು. ಹೀಗಾಗಿ, ಇದನ್ನು ಓದುತ್ತಿದ್ದಂತೆ ಕಣ್ಣು ಎಲ್ಲೋ ತಂಗುತ್ತದೆ, ಮನಸ್ಸು ಎಲ್ಲೋ ನಿಲ್ಲುತ್ತದೆ. ತುಂಬಾ ಸಹೃದಯಿ ಆಗಿರುವ ಕಾರಣ ಅವರ ಬರವಣಿಗೆ ಅಂಥ ಭಾವವುಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಇದೊಂದು ಭಾವಗದ್ಯ.ಮಣಿಕಾಂತ್‌ರ ಈ ಪುಸ್ತಕವನ್ನು ನಮ್ಮ ಮಕ್ಕಳಿಗೆ ಓದಲು ಕೊಡಬೇಕು. ಆಗ ಅವರು ನಮ್ಮನ್ನು ನೋಡುವ ಭಾವವೇ ಬೇರೆಯಾದಂತೆ ಕಾಣುತ್ತದೆ.’ ಕೃಷ್ಣೇಗೌಡರ ಈ ಅಭಿಪ್ರಾಯಕ್ಕೆ ನನ್ನದು ಸಂಪೂರ್ಣ ಸಮ್ಮತಿ.

ನಮ್ ಮುದ್ದೆಗೌಡ್ರು, ಕ್ಷಮಿಸಿ ದೇವೇಗೌಡ್ರು ಹೀಗಂದ್ರಾ?

ಸಾಮಾನ್ಯ

ಮೇ ಮುಗ್ಯೋ ತನ್ಕ ನಮ್ ರಾಜ್‌ಕಾರುಣಿಗುಳ್ಗೆ ನಿದ್ದಿಲ್ಲ.  ನಮುಗಿಲ್ಲದ್ ನಿದ್ದಿ ನಿಮಗ್ಯಾಕೆ ಅಂಥ, ಮತುದಾರುರ ನಿದ್ದಿಗೂ ಭಂಗ ತಂದವ್ರೆ. ಮತುದಾರ್ರಿಗೆ ಮೊಂಕುಬೂದಿ ಎರಚೋದು ಹೆಂಗೆ ಅಂಬೋ ಸಂಶೋದ್ನೆಗೆ ಇರೋಬರೊ ರಾಜ್ಕೀಯ ಪಕ್ಸುಗುಳು ಕಾಸು ಸುರಿದಿವ್ಯಂತೆ.

ಚುನಾವಣೆ ಟೇಮಲ್ಲಿ ಬಿಸಿಬಿಸಿ ಸುದ್ದಿ ಮಧ್ಯೆ ಲೋಡುಗಟ್ಟಲೇ ಜಾಹೀರಾತು(ಥೂ) ಮಾರಿ ಜೇಬು ತುಂಬ್ಸಿಕೊಳ್ಳೋಕೆ ಪೇಪರ್‌ನೋರು, ಟೀವಿನೋರು ಐನಾತಿ ಪಿಲಾನು ಮಾಡವ್ರೆ ಅಂಬುತಾ ಅದ್ಯಾರೋ ಲದ್ದಿಯೊ ಬುದ್ಧಿಯೊ ಇರೋ ಜೀವಿ ಹೇಳ್ತಾವ್ನೆ. ನನ್ ಈ ಘನಂದಾರಿ ಕೆಲ್ಸಕ್ಕೆ ನೊಬಲ್ಲು ಕೊಡಿ ಅಂಬುತಾ ಆಯಪ್ಪ ಬಾಯಿ ಬಡಕೋತಾ ಇದಾನೆ.

ಈ ಗಲಾಟೆನಾಗೆ ನಮ್ ರಾಜಕಾರಣಿಗಳು ಇಲೆಕ್ಷನ್‌ಗೆ ಸಜ್ಜಾಗ್ತಾವ್ರೆ. ಜಯ ಲಕ್ಷ್ಮಮ್ಮುನ್ನ ತಮ್ ಕಡೀಗೆಯಾ ವಾಲಿಸಿಕೊಳ್ಳೋಕೆ ಅವ್ರು ಈಗೇನ್ ಕಡುದು ಕಟ್ಟೆ ಹಾಕವ್ರೆ ಅಂಬೋದನ್ನು ಅವ್ರ ಬಾಯಲ್ಲೇ ಕೇಳೋಣ್ವಾ?

ದೇವೇಗೌಡ: ನಾನು ಸನ್ ಆಫ್ ಸಾಯಿಲ್ಲು. ಮಣ್ಣಿಂದಲೇ ರಿಯಲ್ಲಾಗಿ ಎದ್ದು ಬರೋಕೆ ಸಾಕಷ್ಟು ಲೋಡು ಮಣ್ಣು ರಾಶಿ ಹಾಕಿಸ್ತಾ ಇವ್ನಿ. ನನ್ ಜತೆಗೇನೇ ಕುಮಾರನೂ ದಿಲ್ಲಿಗೆ ಬರೋ ಹಂಗೆ ಆಗಬೇಕು. ಅದುಕ್ಕೆ ಡಬಲ್ಲು ಡಬಲ್ಲು ಪೂಜೆ ಮಾಡಿಸ್ತಾಯಿವ್ನಿ. ನನ್ನ ಶತ್ರುಗಳು ನೆಗೆದು ನೆಲ್ಲಿಕಾಯಾಗಲಿ ಅಂಥ ಮಾಟಾ ಮಂತ್ರನೂ ಜೋರಾಗೆ ಮಾಡಿಸಿವ್ನಿ. ದೊಡ್‌ದೊಡ್ ಬಲಿನೂ ಕೊಡಬೇಕಂತೆ. ನಾಡಿ ನೋಡುದವ್ರು ನಿಮ್ಗೆ ರಾಜ್‌ಯೋಗ ಐತೆ, ಶುಭುವಾಗ್ತೈತೆ ಅಂದವ್ರೆ. ಆದ್ರೆ ಕೈ ನೋಡುದವ್ರುನಿಮರಾಯಾ ಹೆಗಲ್‌ಮ್ಯಾಲ್ ಕುಂತವ್ನೆ ಅಂದವ್ರೆ. ನೋಡೋಣ..

ವರುಣ್ ಗಾಂಧಿ: ನಾನೇನು ತಪ್ಪು ಮಾಡಿಲ್ಲ ಅನ್ನೋದಕ್ಕೆ ಬಾಳಾ ಠಾಕ್ರೆ ನೀಡಿರೋ ಸರ್ಟಿಫಿಕೇಟೇ ಸಾಕ್ಷಿ. ಚುನಾವಣೆಯಲ್ಲಿ ಮತದಾರರ ಸೆಳೆಯೋದಕ್ಕೆ ಇನ್ನೂ ಸಕತ್ತು ಟೈಲಾಗ್ ರೆಡಿ ಮಾಡಿದ್ದೆ. ಆರಂಭದಲ್ಲೇ ಸಿಕ್ಕಿಹಾಕಿಕೊಂಡೆ. ಬೇಕಿದ್ದವರು ಟೈಲಾಗ್ ಬುಕ್‌ನ ಪಡೀಬಹುದು.

ಸೋನಿಯಾಗಾಂಧಿ: ‘ಭಾರತಕ್ಕಾಗಿ ತವರು ದೇಶ ಬಿಟ್ಟೆ.. ಅತ್ತೇನಾ ಕೊಟ್ಟೆ, ಗಂಡನ್ನ ಕೊಟ್ಟೆ ’ ಅನ್ನೋ ಟೈಲಾಗ್ ಹಳೆಯದಾಯಿತು. ಮತ್ತೆ ಇಂದಿರಮ್ಮನ ಸ್ಟೈಲಲ್ಲಿ ನಾನು ನನ್ನ ಮಗಳು ಸೀರೆ ಉಟ್ಟು ಮತದಾರರ ಮುಂದೆ ನಿಲ್ತೇವೆ. ಮತದಾರರ ಸೆಳೆಯುವಂತೆ ಮುಗುಳ್ನಗುತ್ತಾ, ಕೈಮುಗಿಯೋದರ ರಿಹರ್ಸಲ್ ಮಾಡ್ತಾ ಇದ್ದೀವಿ. ಮೊದಲು ತೆರೆಹಿಂದಿನ ಪ್ರಧಾನಿಯಾಗಿದ್ದೆ. ನನಗಂತೂ ಪ್ರಧಾನಿ ಯೋಗ ಬರೆದಿಲ್ಲ. ರಾಹುಲ್‌ನನ್ನು ರಾಜೀವ್ ಥರಾ, ಪ್ರಿಯಾಂಕಾನಾ ನಮ್ಮ ಅತ್ತೆ ಥರಾ ಜನರ ಮನದಲ್ಲಿ ನಿಲ್ಲಿಸೋದು ನನ್ನಾಸೆ. ಮುಂದೆ ಒಂದು ದಿನ ಅವರು ಪ್ರಧಾನಿ ಕುರ್ಚಿ ಹತ್ತಿದರೆ, ಅದಕ್ಕಿಂತ ಸೌಭಾಗ್ಯ ಏನೈತೆ?

ಆಡ್ವಾಣಿ: ವಾಜಪೇಯಿ ಮನೆ ಸೇರಿದ್ದಾರೆ. ಅವರಿಲ್ಲದ ಕೊರತೆ, ಈ ಚುನಾವಣೆಯಲ್ಲಿ ಕಾಡ್ತಾಯಿದೆ. ಏನ್ ಲಾಗಾ ಹಾಕಿದ್ರೂ ಜನಗಳ ಮನಸು ಕಮಲದತ್ತ ವಾಲುತ್ತಿಲ್ಲ. ವಾಜಪೇಯಿ ಮುಖವಾಡ ಹಾಕಿಕೊಂಡು, ಪ್ರಚಾರ ಮಾಡಬೇಕು ಅಂಥ  ನಿರ್ಧರಿಸಿದ್ದೇನೆ. ಪ್ರಧಾನಿಯಾಗೋ ಯೋಗ ನನ್ನ ಹಣೆಯಲ್ಲಿ ಬರೆದಿದ್ಯೋ ಇಲ್ವೋ ರಾಮನೇ ಬಲ್ಲ..

ಚಿರಂಜೀವಿ: ನಾನು ಅಸಲೀ ಕಲಾವಿದ. ಚುನಾವಣೆ ಅನ್ನೋದು, ನನ್ನಲ್ಲಿರೋ ಕಲಾವಿದನಿಗೆ ನಿಜಕ್ಕೂ ಒಂದು ಸವಾಲು. ಉತ್ತಮವಾಗಿ ಅಭಿನಯಿಸಿ, ಬಣ್ಣದ ಟೈಲಾಗ್‌ಗಳಿಂದ ಮತದಾರರ ಮರಳು ಮಾಡೋ ಆತ್ಮವಿಶ್ವಾಸ ನನಗಂತೂ ಇದೆ.

ಗೆಳೆಯರೇ ಈ ರಾಜಕೀಯ ವಿಡಂಬನೆ ಏನನ್ನಿಸಿತು?