ಒಂದೇ ಒಂದು ಸಾರಿ, ಕಣ್ಮುಂದೆ ಬಾರೇ..

ಸಾಮಾನ್ಯ

ಎಲ್ಲಿರುವೆ ಮನವ ಕಾಡುವ ರೂಪಸಿಯೇ.. ‘ಎಂದು ಅನಂತ್ ನಾಗ್ ಥರಹಾ ಹಾಡುತ್ತಾ ನಾನು ಕಾಡು ಮೇಡು ಅಲೆಯಲು ಸಾಧ್ಯವಿಲ್ಲ. ಆದರೂ ಹುಡುಕುತ್ತಲೇ ಇರುತ್ತೇನೆ. ಇವರಲ್ಲಿ ಯಾರಾದರೂ ನನ್ನವಳು ಇದ್ದಿರಬಹುದಾ ಎಂದು ಊಹಿಸುತ್ತೇನೆ. ನೀ ಯಾರು ನನಗೆ ಗೊತ್ತಿಲ್ಲ.. ನಾ ಯಾರು ನಿನಗೆ ಮೊದಲೇ ಗೊತ್ತಿಲ್ಲ.. ಆದರೆ ನೀ ನನಗೆ ಬೇಕು. ಒಂದು ಸಲ, ಒಂದೇ ಒಂದು ಸಲ ನನ್ನ ಬಳಿಗೆ ನೀ ಬಾ.. ನನ್ನ ಹೃದಯವನ್ನು ಬಿಚ್ಚಿಡುತ್ತೇನೆ… ಅದರೊಳಗೆ ನಿನ್ನನ್ನು ಬಚ್ಚಿಟ್ಟುಕೊಳ್ಳುತ್ತೇನೆ.

ಏಳು ಸಮುದ್ರ ದಾಟಿದ ರಾಜಕುಮಾರ ನಾನಲ್ಲ. ನಭದಿಂದ ಸೂರ್ಯನ ಕಿತ್ತು ತಂದು ನಿನ್ನ ತುರುಬಿಗೆ ನಾ ಮುಡಿಸಲಾರೆ. ಸೂರ್ಯನ ತಂದು ನಿನ್ನ ಮಗನಿಗೆ ಆಟಿಕೆಯಾಗಿ ನೀಡುತ್ತೇನೆ ಎಂದು ನಾ ಅಪ್ಪಿತಪ್ಪಿಯೂ ಹೇಳಲಾರೆ. ಆದರೂ ನೀ ನನ್ನ ಪ್ರೀತಿಸು, ಮುದ್ದಿಸು. ಜಗತ್ತಿನಲ್ಲಿ ಮನುಷ್ಯ ಹೆಚ್ಚು ಪ್ರೀತಿಸುವುದು ಯಾರನ್ನು ಗೊತ್ತೆ? ಇನ್ಯಾರನ್ನು ಅವನನ್ನು ಅವನೇ ಪ್ರೀತಿಸುತ್ತಾನೆ. ಆಮೇಲೆ ಬಂಧು, ಬಳಗ ಇತ್ಯಾದಿ. ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ. ನೀನು ನಂಬಬೇಕು. ಪರೀಕ್ಷೆ ಮಾಡಲು ಹೊರಟರೇ, ನನಗೆ ಸಿಟ್ಟು ಬರುತ್ತದೆ. ನನ್ನ ಪ್ರೀತಿಯನ್ನು ಶಂಕಿಸುವ ನಿನ್ನ ಜೊತೆ ನಾನು ಹೇಗೆ ತಾನೇ, ಬೆರೆಯಲಿ.

ಬಹುಶಃ ನೀನು ಸಹಾ ನನ್ನನ್ನು ಹುಡುಕುತ್ತಿರುವೆ. ಪ್ರಪಂಚ ದೊಡ್ಡದು, ಹೀಗಾಗಿ ಮುಖಮುಖ ನೋಡಲು ಸಾಧ್ಯವಾಗಿಲ್ಲ. ಕಣ್ಣಲ್ಲಿ ಕಣ್ಣಿಟ್ಟು, ಕೈಯಲ್ಲಿ ಕೈಹಿಡಿದು ಆ ಬಿಸಿಯನ್ನು ಸವಿಯಲು ಸಾಧ್ಯವಾಗಿಲ್ಲ. ರಸ್ತೆ ಬದಿಯ ಪಾನೀಪುರಿ ತಿನ್ನುತ್ತಾ, ಪಾರ್ಕಿನ ಮರದಡಿ ನಿಂತು ಮಳೆ ಇನ್ನಷ್ಟು ಸುರಿಯಲಿ ಎಂದು ಪ್ರಾರ್ಥಿಸುವ ಅವಕಾಶ ನಮ್ಮಿಬ್ಬರಿಗೆ ಸಿಕ್ಕಿಲ್ಲ. ಪ್ರಪಂಚ ನಮಗಾಗಿ ಚಿಕ್ಕದಾಗಲಿ.. ಏನಂತೀಯಾ?

ಅದೇನೇ ಆಗಲಿ, ಬೇಗ ಬಾ. ಹೇಗಾದರೂ ಬಾ. ಓಡಿ ಬಾ. ನನ್ನ ಕೈಗೆ ಕೈ ಸೇರಿಸು. ಜಗತ್ತು ನಾಚುವಷ್ಟು ಪ್ರೀತಿ ಮಾಡೋಣ, ಜಗತ್ತಿಗೆ ಗೋಲಿ ಹೊಡೆಯೋಣ. ನಿನ್ನ ಒಂದೇ ಒಂದು ಕಣ್ಣ ಹನಿ ಭೂಮಿ ಸೇರದಂತೆ ನಾ ನಿನ್ನ ಕಾಯುತ್ತೇನೆ. ಮೊದಲೇ ಹೇಳಿ ಬಿಡುತ್ತೇನೆ. ಇದು ನನ್ನ ದೌರ್ಬಲ್ಯವೂ ಹೌದು, ಪ್ರಾಬಲ್ಯವೂ ಹೌದು. ನಿನ್ನ ಕನಸಿನ ಕಾಲು, ನನ್ನ ಹಾಸಿಗೆಯ ಮೀರಬಾರದು. ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡಬೇಡ. ದೂರ ನಿಲ್ಲಬೇಡ. ನನ್ನ ಮಾತನ್ನು ತಾಳ್ಮೆಯಿಂದ ಕೇಳಿಸಿ ಕೋ. ವಾರವಿಡೀ ನಾವಿಬ್ಬರೂ ಹಸಿದ ಸಂದರ್ಭದಲ್ಲಿ ಒಂದು ರೊಟ್ಟಿ ಸಿಕ್ಕರೇ, ನಾನು ಅದನ್ನು ನಿನಗೆ ನೀಡುತ್ತೇನೆ. ನಿನ್ನ ತೇಗು ನಾನಾಗುತ್ತೇನೆ. ನಾನು ನೀರು ಕುಡಿದು ಮಲಗುತ್ತೇನೆ. ಇದು ಸುಳ್ಳಲ್ಲ. ಹದಿನಾರಾಣೆ ಸತ್ಯ.

ಸದ್ಯಕ್ಕಂತೂ ಭಯವಿಲ್ಲ. ಕೈಬಾಯಿಗೆ ಸಾಕಾಗುವಷ್ಟು ಸಂಬಳ ಬರುತ್ತೆ. ನಾಳೆ ಇರುತ್ತಾ? ಗೊತ್ತಿಲ್ಲ. ಸಂಬಳ ಇಲ್ಲದಿದ್ದರೂ, ಕೆಲಸ ಇಲ್ಲದಿದ್ದರೂ ನಾ ಇರುತ್ತೇನೆ. ನನ್ನುಸಿರು ಇರುವ ತನಕ ನಿನ್ನ ಉಸಿರು ನಿಲ್ಲದಂತೆ ನೋಡಿಕೊಳ್ಳುತ್ತೇನೆ. ಉಸಿರಲ್ಲಿ ಉಸಿರಾಗಿ ಬೆರೆತು, ಪ್ರೇಮ ಲೋಕದಲ್ಲಿ ವಿಹರಿಸೋಣ ಬಾರೇ.

ನಾನು ಬಡವಿ ನೀನು ಬಡವ
ಒಲವೇ ನಮ್ಮ ಬದುಕು
ಹಂಚಿಕೊಂಡೆವದನು ನಾವು
ಅದಕು ಇದಕು ಎದಕು..

ಯಾವುದೋ ಪಾರ್ಕಲ್ಲಿ, ಸಿನಿಮಾ ಟಾಕೀಸಲ್ಲಿ, ಬಿಗ್ ಬಜಾರ್ ನಲ್ಲಿ ಕೈಕೈ ಹಿಡಿದು ಸುತ್ತಾಡುವ ಪ್ರಣಯದ ಹಕ್ಕಿಗಳ ಕಂಡಾಗ ಮನದಲ್ಲಿ ಚಿಂತೆಯ ಗುಂಡುಕಲ್ಲು. ಒನಕೆಯಿಂದ ಹೃದಯವ ಕುಟ್ಟಿದಷ್ಟು ಯಾತನೆ. ಆದರೆ ಏನು ಮಾಡಲಿ, ನೀನು ಬರುವ ತನಕ ಇದೆಲ್ಲಾ ಇದ್ದದ್ದೇ. ‘ಮದುವೆಯಾಗುವ ತನಕ ಆಗಲಿಲ್ಲವಲ್ಲ ಎಂಬ ಚಿಂತೆ. ಆದ ಮೇಲೆ ನೂರೊಂದು ಚಿಂತೆ’ಎಂದು ಗೆಳೆಯ ಗೊಣಗುತ್ತಿದ್ದ. ಆದರೂ ನಾನು ಇದಕ್ಕೆಲ್ಲ ಹೆದರುವುದಿಲ್ಲ. ನೀನು ನನ್ನೊಂದಿಗೆ ಇದ್ದರೆ, ಭೂಮಂಡಲವನ್ನೇ ಕುಟ್ಟಿ ಪುಡಿ ಮಾಡುವ ಧೈರ್ಯ ಎದೆಯಲ್ಲಿ ಇರುತ್ತೆ.

ನಿನಗೆ ಮುಖ್ಯ ವಿಷಯ ಹೇಳೋದು ಮರೆತೆ. ನನಗೊಬ್ಬಳು ತಾಯಿಯಿದ್ದಾಳೆ. ಬೇರೆಯವರೂ ಇದ್ದಾರೆ.. ಆದರೆ ನನ್ನ ಲೆಕ್ಕದಲ್ಲಿ ಅವಳೊಬ್ಬಳೇ ಮುಖ್ಯ.. ಮುಖ್ಯ ಮಾತ್ರವಲ್ಲ ನನ್ನ ಜೀವ. ನನ್ನ ಪಾಲಿಗೆ ಅವಳೊಂದು ಕಣ್ಣು, ನೀನೊಂದು ಕಣ್ಣು. ಯಾವ ಕಣ್ಣಿಗೆ ಪೆಟ್ಟಾದರೂ ನನಗೇ ನೋವಾಗುತ್ತದೆ. ಅವಳ ನೋಯಿಸಬೇಡ. ನಿನಗಿದು ಅರ್ಥವಾಗಿದೆ ಅಂದುಕೊಳ್ಳುತ್ತೇನೆ.

ಮೊನ್ನೆ ಕನ್ನಡಿ ನೋಡುತ್ತಿದ್ದೆ. ನಾನು ನಿಜಕ್ಕೂ ಬೆಚ್ಚಲಿಲ್ಲ. ಬೆಚ್ಚುವ ಕಾಲ ಹೋಗಿ ಐದಾರು ವರ್ಷವಾದವು. ಕೂದಲ ಕಾಡಿನಲ್ಲಿ ಬಿಳಿಯರ ಜನಸಂಖ್ಯೆ ಹೆಚ್ಚುತ್ತಿದೆ. ಕರಿಯರ ಹಿಡಿದು ಅವರ ಬುಡಕ್ಕೆ ಕತ್ತರಿ ಹಾಕುವ ತಂತ್ರ ಈಗ ಫಲಿಸುವುದಿಲ್ಲ. ನಿನಗೂ ಇಂಥ ಕಷ್ಟಗಳಿವೆ ನನಗೆ ಗೊತ್ತು. ಆದರೂ ಯಾಕೆ ತಡ ಮಾಡುತ್ತಿರುವೆ? ನೀನು ಬಂದರೆ ಜೊತೆಯಾಗಿ ದೀಪಾವಳಿ ಆಚರಿಸೋಣ. ದೀಪ ಬೆಳಕಿಸೋಣ. ಬಹುಶಃ ನೀನು ಬಂದರೆ ದೀಪದ ಅವಶ್ಯಕತೆಯೇ ಬೇಕಾಗುವುದಿಲ್ಲ.

About Natesha Babu

ಹ.ಚ.ನಟೇಶ ಬಾಬು ಹರಳಾಪುರ, ತುಮಕೂರು ಜಿಲ್ಲೆ, ಕರ್ನಾಟಕ, India ವೃತ್ತಿಯಲ್ಲಿ ಪತ್ರಕರ್ತ, ಗೊತ್ತಿರುವುದು ಅಕ್ಷರ ಬೇಸಾಯ. ನಮ್ಮ ಹೊಲದ ತುಂಬೆಲ್ಲಾ ಕನಸಿನ ಪೈರುಗಳು.

ಒಂದು ಪ್ರತಿಕ್ರಿಯೆ »

Leave a reply to Vasanth ಪ್ರತ್ಯುತ್ತರವನ್ನು ರದ್ದುಮಾಡಿ