Monthly Archives: ಸೆಪ್ಟೆಂಬರ್ 2008

ತೋಚಿದಂತೆ ಗೀಚಲು ಬ್ಲಾಗೇನು ಪರ್ಸನಲ್ ಡೈರಿಯಾ?

ಸಾಮಾನ್ಯ

ಬ್ಲಾಗ್ ಬಗೆಗಿನ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಇದು ಬ್ಲಾಗ್ ಬಗೆಗಿನ ನನ್ನ ಕನಸು ಮಾತ್ರ. ಹಾಗೆಂದು ನನ್ನ ಕನಸಿನಂತೆಯೇ ಈ ‘ಕನಸಿನರಮನೆ ’ ಇದೆ ಅಥವಾ ಇರುತ್ತದೆ ಎಂದರ್ಥವಲ್ಲ.

ಕನ್ನಡ ಬಿತ್ತನೆ ಅಂತರ್ಜಾಲದಲ್ಲಿ ನಿಧಾನವಾಗಿ ಶುರುವಾಗಿದ್ದರೂ, ಬ್ಲಾಗ್‌ಗಳ ದೆಸೆಯಿಂದ ತುಸು ವೇಗ ಪಡೆಯುತ್ತಿದೆ. ಇಮೇಲ್ ಅಡ್ರೆಸ್ ಪಡೆಯುವುದು ಎಷ್ಟು ಸುಲಭವೋ, ಬ್ಲಾಗ್ ಆರಂಭಿಸುವುದೂ ಅಷ್ಟೇ ಸುಲಭ. ಹೀಗಾಗಿ ಬ್ಲಾಗ್ ಮಾಲೀಕರ ಸಂಖ್ಯೆ ಹೆಚ್ಚುತ್ತಿದೆ. ತಮಗನಿಸಿದ್ದನ್ನು ಎಲ್ಲರಿಗೂ ಹೇಳುವ ಮತ್ತು ಹಂಚಿಕೊಳ್ಳುವ ಪ್ರಯತ್ನದಿಂದ ಮಾನವ ಸಂಬಂಧಗಳು ಚಿಗುರುತ್ತವೆ. ಈ ನಿಟ್ಟಿನಲ್ಲಿ ಸಂವಾದದ ಹೊಸ ಮಾಧ್ಯಮವಾಗಿ ಬ್ಲಾಗ್‌ಗಳು ಅರಳಿ ಘಮಘಮಿಸುತ್ತಿವೆ.
ಟಿವಿ, ರೇಡಿಯೋ, ಪತ್ರಿಕೆ ಮತ್ತು ಸಿನಿಮಾ ರೀತಿಯಲ್ಲಿಯೇ ಬ್ಲಾಗ್‌ಗಳೂ ಸಮೂಹ ಸಂವಹನದ ಆಧುನಿಕ ಅಂಗ. ಯೂನಿಕೋಡ್ ಜನಪ್ರಿಯತೆಯಿಂದಾಗಿ ಕನ್ನಡ ಬ್ಲಾಗ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಬ್ಲಾಗಿನ ಗೂಡಿನಲ್ಲಿ ಒಲಿದಂತೆ ಹಾಡುತ್ತಿರುವ ಬ್ಲಾಗಿಗಳಿಗೆ, ತಮ್ಮ ಸುತ್ತಲಿನ ಪ್ರಪಂಚವನ್ನು ತಾವು ಕಂಡಂತೆ ಇತರರಿಗೆ ಕಾಣಿಸುವ ಮತ್ತು ಇತರರು ಕಂಡ ಪ್ರಪಂಚವನ್ನು ಕಾಣುವ ತವಕ.
ಪ್ರತಿನಿತ್ಯ ಬ್ಲಾಗಿನ ಮನೆಗಳಿಗೆ ತೆರಳುವುದು ಈಗೀಗ ಬ್ರೌಸಿಂಗ್‌ನ ಒಂದು ಭಾಗ. ಅದಕ್ಕೆ ಪೂರಕವಾಗಿ ಬ್ಲಾಗ್‌ಗಳು ಹೊಸ ಪುಟಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಮೈದುಂಬಿಕೊಳ್ಳುತ್ತಿವೆ. ಆದರೆ ಶೇ.೯೦ರಷ್ಟು ಬ್ಲಾಗಿಗಳಿಗೆ ಅಪ್‌ಡೇಟ್ ಮಾಡಲು ಆಲಸ್ಯ. ಇವರುಗಳು ತಮ್ಮ ಬ್ಲಾಗ್‌ಗೆ ಬೀಗ ಜಡಿದರೆ ಒಳ್ಳೆಯದು. ಇದರಿಂದ ಬ್ಲಾಗ್ ಓದುಗರ ಅಮೂಲ್ಯ ಸಮಯ ಉಳಿತಾಯವಾಗುತ್ತದೆ.

ಅಂದ ಹಾಗೇ, ಕನ್ನಡದಲ್ಲಿರುವ ಒಟ್ಟು ಬ್ಲಾಗ್‌ಗಳ ಸಂಖ್ಯೆ ಎಷ್ಟು? -ಈ ಪ್ರಶ್ನೆಗೆ ಖಚಿತವಾಗಿ ಹೇಳುವುದು ಕಷ್ಟ. ಹೊಸಬರ ದಂಡೇ ಇತ್ತ ಹರಿದು ಬರುತ್ತಿದೆ. ಬ್ಲಾಗ್ ನೋಡಿದ ಮರುಕ್ಷಣವೇ, ತಾವೊಂದು ಬ್ಲಾಗ್ ಕಟ್ಟಬೇಕೆಂದು ಅನೇಕರು ಬಯಸುತ್ತಾರೆ. ಹೀಗಾಗಿ ದಿನಕ್ಕೆ ಹತ್ತಾರು ಬ್ಲಾಗ್‌ಗಳು ಹುಟ್ಟುತ್ತಿವೆ. ಅದೇ ರೀತಿ ಸಾಯುತ್ತಿವೆ. ಹೀಗೆ ಹರಿದು ಹಂಚಿ ಹೋಗಿರುವ ಕನ್ನಡದ ಅಷ್ಟೂ ಬ್ಲಾಗ್‌ಗಳನ್ನು ಒಟ್ಟುಗೂಡಿಸುವಲ್ಲಿ ಬೆಂಗಳೂರಿನ ರೋಹಿತ್ ರಾಮಚಂದ್ರಯ್ಯ ಯಶಸ್ವಿಯಾಗಿದ್ದಾರೆ.
ಮೇ.೧೪, ೨೦೦೮ರವರೆಗೆ ಲಭ್ಯವಿರುವ ಅಂಕಿ ಸಂಖ್ಯೆಗಳ ಪ್ರಕಾರ ಕನ್ನಡದಲ್ಲಿ ೬೧೬ ಬ್ಲಾಗ್‌ಗಳಿವೆ. ರೋಹಿತ್ ತಮ್ಮ kannadabala.blogspot.comನಲ್ಲಿ ಕನ್ನಡದ ಎಲ್ಲಾ ಬ್ಲಾಗ್‌ಗಳ ಕೊಂಡಿಗಳನ್ನು ಪ್ರಕಟಿಸಿದ್ದಾರೆ. ಬ್ಲಾಗಿಗರ ಮಧ್ಯೆ ಬಾಂಧವ್ಯ ಬೆಳೆಸಲು ಮತ್ತು ಬ್ಲಾಗ್‌ಗಳ ಬಗ್ಗೆ ಮಾಹಿತಿ ಹಂಚುವಲ್ಲಿ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಕನ್ನಡದಲ್ಲಿ ೬೦೦ಕ್ಕೂ ಅಕ ಬ್ಲಾಗ್‌ಗಳಿವೆ. ಈ ಸಂಖ್ಯೆ ಏನೋ ಸಮಾಧಾನಕರ. ಆದರೆ ಗುಣಮಟ್ಟ? ಈ ಬಗ್ಗೆ ದಟ್ಸ್ ಕನ್ನಡ.ಕಾಮ್ ಸಂಪಾದಕ ಎಸ್.ಕೆ.ಶಾಮ ಸುಂದರ ಅವರಿಗೆ ಅಸಮಾಧಾನ. ‘ಮಾಹಿತಿಯನ್ನು ಎಲ್ಲರಿಗೂ ಸುಲಭವಾಗಿ ಮತ್ತು ಉಚಿತವಾಗಿ ಹಂಚುವುದು ಅಂತರ್ಜಾಲದ ಮೂಲ ಆಶಯ. ಈ ನಿಟ್ಟಿನಲ್ಲಿ ವೆಬ್‌ಸೈಟ್‌ಗಳು ಮತ್ತು ಬ್ಲಾಗ್‌ಗಳು ಕಾರ್ಯ ನಿರ್ವಹಿಸಬೇಕು’ ಎಂಬುದು ಅವರ ಕಳಕಳಿ. ಆದರೆ ಕನ್ನಡ ಬ್ಲಾಗಿಗಳು ಭಾವನಾತ್ಮಕ ನೆಲೆಯಲ್ಲಿಯೇ ನಿಂತುಬಿಟ್ಟಿದ್ದಾರೆ. ಬೇರೆ ಆಲೋಚಿಸಲು ಯಾರೂ ಸಿದ್ಧರಿಲ್ಲ.
ಕನ್ನಡದ ಬಹುಪಾಲು ಬ್ಲಾಗ್‌ಗಳು ಪದ್ಯ, ಹನಿಗವನ, ಲೇಖನ, ಕತೆ, ನೆನಪು, ಕನಸು, ಕನವರಿಕೆಗಷ್ಟೆ ಮೀಸಲು. ಎಲ್ಲಾ ರಂಗದ ವ್ಯಕ್ತಿಗಳೂ ಬ್ಲಾಗ್ ತೆರೆಯಬೇಕು. ಅದರಲ್ಲಿ ತಮ್ಮ ಮತ್ತು ತಮ್ಮ ಕ್ಷೇತ್ರದ ವಿಶೇಷ, ಸಾಹಸ, ಸವಾಲು, ಸಾಧನೆ ಮತ್ತು ತಾಕಲಾಟಗಳನ್ನು ವಿವರಿಸಬೇಕು. ಉಪ್ಪಿಟ್ಟು ಮಾಡುವುದು ಹೇಗೆ ಎನ್ನುವುದರಿಂದ ಆರಂಭವಾಗಿ, ಸಾಫ್ಟ್‌ವೇರ್ ಲೋಕದ ಪ್ರೋಗ್ರಾಮ್ ಅಥವಾ ಕೋಡಿಂಗ್ ಬರೆಯುವುದು ಹೇಗೆ ಎನ್ನುವ ತನಕ ಮಾಹಿತಿಯ ವಿಲೇವಾರಿಯಾಗಬೇಕು.
ಮೋಟಾರ್ ಸೈಕಲ್ ರಿಪೇರಿ ಹೇಗೆ? ಕಸೂತಿ ಹಾಕುವುದು ಹೇಗೆ? ವಿದ್ಯುತ್ ಅಥವಾ ನೀರಿನ ಬಿಲ್ ಯದ್ವಾತದ್ವಾ ಬಂದರೆ ಯಾರನ್ನು ಕೇಳಬೇಕು? ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಏನು ಮಾಡಬೇಕು? ಬಾಳೆಎಲೆ ಎಲ್ಲಿ ಸಿಗುತ್ತೆ? ಬಸವನಗುಡಿಗೆ ಮೆಜೆಸ್ಟಿಕ್‌ನಿಂದ ಹತ್ತಿರದ ದಾರಿ ಯಾವುದು? -ಇಂಥ ಹತ್ತಾರು ಸಂಗತಿಗಳು ಬ್ಲಾಗ್‌ಗಳಲ್ಲಿ ಚರ್ಚೆಯಾಗಬೇಕು. ಜನಸಾಮಾನ್ಯರಿಗೆ ಅರ್ಥವಾಗಬೇಕು.
ಬ್ಲಾಗಿಗರ ಬಗೆಗಿನ ನನ್ನ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಗೆಳೆಯನೊಬ್ಬ, ‘ಕೆಲಸದ ಏಕತಾನತೆಯಿಂದ ಪಾರಾಗಲೆಂದೇ ಬ್ಲಾಗ್‌ನಲ್ಲಿ ಬರೆಯುತ್ತೇವೆ.. ನಮ್ಮ ಆಸಕ್ತಿಯ ಕತೆ, ಕವನಗಳತ್ತ ಗಮನ ನೀಡುತ್ತೇವೆ. ಅಲ್ಲಿ ಬೇರೇನನ್ನೋ ನಿರೀಕ್ಷಿಸುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದ. ಆದರೆ ‘ತೋಚಿದಂತೆ ಗೀಚುವೆ, ನಾನು ನನ್ನಿಷ್ಟ ’ ಎನ್ನಲು ಬ್ಲಾಗ್ ಎಂಬುದು ಮನೆಯ ಕಪಾಟಿನಲ್ಲಿ ಕೊಳೆಯುವ ಡೈರಿಯಲ್ಲ ಎಂದಷ್ಟೆ ಹೇಳುತ್ತೇನೆ.
ಜಗತ್ತಿನ ಕೋಟ್ಯಂತರ ಬಳಕೆದಾರರ ಮುಂದೆ ಬ್ಲಾಗ್‌ಗಳ ಪುಟಗಳು ಬಿಚ್ಚಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಗೂಗಲ್, ಯಾಹೂ, ಗುರೂಜಿ ಮತ್ತಿತರ ಸರ್ಜ್ ಎಂಜಿನ್‌ಗಳ ದೆಸೆಯಿಂದ ಯಾವ ಬ್ಲಾಗನ್ನು ಯಾರು ಯಾವಾಗ ಬೇಕಾದರೂ ನೋಡುವ ಸಾಧ್ಯತೆಗಳಿವೆ. ಹೀಗಾಗಿ ಬ್ಲಾಗಿಗರ ಜವಾಬ್ದಾರಿ ದೊಡ್ಡದು. ಬ್ಲಾಗ್ ಎಂಬುದು ಖಾಸಗಿ ಡೈರಿಯಲ್ಲ… ಅದು ನಾಲ್ಕು ಗೋಡೆಗಳ ಮನೆಯಲ್ಲ.
ನಿಜಕ್ಕೂ ಕನ್ನಡದ ಬ್ಲಾಗ್‌ಗಳೆಂದರೆ ನೆನಪಾಗುವುದು ಕೆಲವಷ್ಟೆ. ಪತ್ರಿಕೆಗಳಲ್ಲಿ ಜೋಗಿ ಬರಹಗಳನ್ನು ಓದದವರಿಗಷ್ಟೆ, ಜೋಗಿಮನೆ(http://jogeemane.blogspot.com/) ಖುಷಿ ತರುತ್ತದೆ. ತಮ್ಮ ಹಳೆಯ ಬರಹಗಳನ್ನು ತುಂಬುವ ಕಣಜವಾಗಿ ಅವರು ಬ್ಲಾಗನ್ನು ಬಳಸುತ್ತಿದ್ದಾರೆ! ಜೋಗಿ ಅವರಂತೆಯೇ ತಮ್ಮ ಹಳೆಯ ಬರಹಗಳನ್ನೇ ಬ್ಲಾಗ್‌ಗಳಲ್ಲಿ ಅನೇಕರು ತುಂಬುತ್ತಿದ್ದಾರೆ.
ವೈವಿಧ್ಯದ ದೃಷ್ಟಿಯಲ್ಲಿ ನೋಡುವುದಾದರೆ ಮೋಟುಗೋಡೆ(http://motugode.blogspot.com/), ಏನ್‌ಗುರು(http://enguru.blogspot.com/), ಇ-ಜ್ಞಾನ(http://e-jnana.blogspot.com/), ಅಚ್ಚ-ಕನ್ನಡ(http://accha-kannada.blogspot.com/) ಬ್ಲಾಗ್‌ಗಳನ್ನು ಪ್ರಸ್ತಾಪಿಸಬೇಕು. ಐಟಿ ಕನ್ನಡಿಗರ ಬನವಾಸಿ ಬಳಗ ನಡೆಸುತ್ತಿರುವ ಏನ್‌ಗುರು, ನಾಡು-ನುಡಿ ಬರಹಗಳ ಖಜಾನೆ. ಕನ್ನಡದ ಹೊಸ ಸವಾಲು, ಸಂಕಟ, ಸಮಸ್ಯೆಗಳ ಬಗ್ಗೆ ಇಲ್ಲಿ ಸದಾ ಕಾವೇರಿದ ಚರ್ಚೆ.
ಬ್ಲಾಗ್ ಕೆಲವರ ಪಾಲಿಗೆ ಕೋತಿ ಕೈಯೊಳಗಿನ ಮಾಣಿಕ್ಯದಂತಾಗಿದೆ. ತಮ್ಮ ಕೋಪ-ತಾಪ, ವೈಯಕ್ತಿಕ ನಿಂದೆಗೆ ಬ್ಲಾಗ್ ಅಸ್ತ್ರವಾಗಿದೆ. ಬ್ಲಾಗ್‌ಗಳನ್ನು ಜನಪ್ರಿಯಗೊಳಿಸಲು ‘ಬರಹ ’ದ ರೂವಾರಿ ಶೇಷಾದ್ರಿ ವಾಸು ಪ್ರಯತ್ನಿಸುತ್ತಿದ್ದಾರೆ. ಕನ್ನಡ ಬ್ಲಾಗ್‌ಗಳು ಅಪ್‌ಡೇಟ್ ಆದ ತಕ್ಷಣ http://www.baraha.com/kannada/ ಮಾಹಿತಿ ಒದಗಿಸತ್ತದೆ. ಇದರ ಜತೆಗೆ ದಟ್ಸ್‌ಕನ್ನಡ.ಕಾಮ್ ಮತ್ತು ವೆಬ್‌ದುನಿಯಾಗಳು ಬ್ಲಾಗ್‌ಗಾಗಿ ಪ್ರತ್ಯೇಕ ವಿಭಾಗ ತೆರೆದಿವೆ.
ಬ್ಲಾಗಿಗಳನ್ನು ಕವಿಗಳು, ಲೇಖಕರು ಎನ್ನಲು ಸಾಹಿತ್ಯವಲಯದ ಹಳೆಯ ತಲೆಮಾರು ಸಿದ್ಧವಿಲ್ಲ. ಪುಟ ತುಂಬಿಸಲು ಪೈಪೋಟಿ ನಡೆಸುತ್ತಿರುವ ಕೆಲವು ಬ್ಲಾಗಿಗಳು ಅಕ್ಷರ ಮಾಲಿನ್ಯಕ್ಕೆ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಕಾಳಿಗಿಂತ ಜೊಳ್ಳೇ ಜಾಸ್ತಿಯಿದೆ ಅನ್ನಿಸಿದರೂ, ಕನ್ನಡ ಬ್ಲಾಗ್‌ಗಳನ್ನು ಕಡೆಗಣಿಸುವಂತಿಲ್ಲ.
ಈ ಮಧ್ಯೆ ಕನ್ನಡ ಬ್ಲಾಗಿಗಳನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನಗಳು ಆಗಾಗ ನಡೆಯುತ್ತಿವೆ. ಕಂಪ್ಯೂಟರ್ ಎನ್ನುವುದು ಕಚೇರಿಯಲ್ಲಿ ಮಾತ್ರವಲ್ಲದೇ ಅಡುಗೆ ಮನೆ ಶೆಲ್ಪ್ ಮೇಲೂ ಪವಡಿಸಿದೆ. ಹೀಗಾಗಿ ಸಹಜವಾಗಿಯೇ ಬ್ಲಾಗ್ ಕ್ರೇಜ್ ಇನ್ನಷ್ಟು, ಮತ್ತಷ್ಟು ಹೆಚ್ಚಾಗಿದೆ. ಆದರೆ ಬ್ಲಾಗಿಗರ ಜವಾಬ್ದಾರಿ?

ಡಿಎನ್‌ಎ ಹಿಂದೆ ಓಡಿದ ಬೆಂಗಳೂರು ಪತ್ರಕರ್ತರು!

ಸಾಮಾನ್ಯ

ಇ ದು ಮತ್ತೊಂದು ಸುಂಟರಗಾಳಿ. ಬೆಂಗಳೂರಿನ ಪತ್ರಿಕಾಲೋಕದಲ್ಲಿ ಈಗ ಸುಂಟರಗಾಳಿ ಎಬ್ಬಿಸಿರುವುದು ಡಿಎನ್‌ಎ! ಈ ಹಿಂದೆ ಮುಂಬಯಿ ಪದರಗುಟ್ಟಿಸಿ, ತನ್ನ ಜಾಗ ಭದ್ರಪಡಿಸಿಕೊಂಡ ಡಿಎನ್‌ಎ ಕಣ್ಣೀಗ ಬೆಂಗಳೂರಿನತ್ತ. ನಿರೀಕ್ಷೆಯಂತೆಯೇ ಆದರೆ ವರ್ಷಾಂತ್ಯಕ್ಕೆ ಪತ್ರಿಕೆ ಓದುಗರ ಕೈ ಸೇರುತ್ತದೆ.
‘Might Is Right’ ಎನ್ನುವುದು ಪತ್ರಿಕೋದ್ಯಮಕ್ಕೂ ಅನ್ವಯ. ಈಗಿನ ಸ್ಪರ್ಧೆ ಪರಿಣಾಮ ಗಟ್ಟಿಗರು ಮಾರುಕಟ್ಟೆಯಲ್ಲಿ ಉಳಿಯುತ್ತಾರೆ, ಇತರರು ಬದಿಗೆ ಸರಿಯುತ್ತಾರೆ. ಸ್ಪರ್ಧೆ ಎನ್ನುವುದು ಎಂದಿಗೂ ಒಳ್ಳೆಯದೇ. ಆದರದು ಅನಾರೋಗ್ಯಕರವಾಗಿದ್ದರೆ ಕಷ್ಟ. ಅದರಲ್ಲೂ ಮಾಧ್ಯಮರಂಗದಲ್ಲಿನ ಈ ರೋಗಗ್ರಸ್ಠ ಸ್ಪರ್ಧೆಯಿಂದ ಒಲಿತನ್ನು ನಿರೀಕ್ಷಿಸಲಾಗದು.
‘ವಿಜಯ ಕರ್ನಾಟಕ ’ ಹಿಂದೆ ಇಂಥದ್ದೊಂದು ಕದಲಿಕೆಯನ್ನು ಕನ್ನಡ ಪತ್ರಿಕೋದ್ಯಮದಲ್ಲಿ ಉಂಟು ಮಾಡಿತ್ತು. ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ ಮಾತ್ರವಲ್ಲದೇ ಸ್ಥಳೀಯ ಪತ್ರಿಕೆಗಳ ಪ್ರಸರಣಕ್ಕೆ ಕೈಹಾಕಿದ ವಿಜಯ ಕರ್ನಾಟಕ, ನಾಡಿನ ನಂ.೧ ಪತ್ರಿಕೆಯಾದದ್ದು ಎಲ್ಲರಿಗೂ ತಿಳಿದ ಸಂಗತಿ. ಪತ್ರಿಕೆಯ ಪ್ರಯೋಗಶೀಲತೆ, ಹೊಸತಿನ ತುಡಿತದ ಬಗ್ಗೆ ಎರಡು ಮಾತಿಲ್ಲ. ನಿಂತು ನೀರಾಗಿದ್ದ ಕನ್ನಡ ಪತ್ರಿಕೋದ್ಯಮದಲ್ಲಿ ಚಲನಶೀಲತೆಗೆ ಕಾರಣವಾಗಿದ್ದು ಪತ್ರಿಕೆಯ ಹೆಗ್ಗಳಿಕೆ. ಆದರೆ ಅದು ಆರಂಭಿಸಿದ ದರ ಸಮರದಿಂದ ಸಣ್ಣ ಪತ್ರಿಕೆಗಳು ಬಾಗಿಲು ಹಾಕಿಕೊಂಡದ್ದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.
ಈಗ ಬೆಂಗಳೂರಿನಲ್ಲಿ ಕಣ್ತೆರೆಯಲು ಸಿದ್ಧತೆ ನಡೆಸಿರುವ ಡಿಎನ್‌ಎ, ಬೆಂಗಳೂರಿನಲ್ಲಿ ೩ ಲಕ್ಷ ಪ್ರಸರಣ ಹೊಂದಲು ಸಂಕಲ್ಪಿಸಿದೆ. ಅಂದಹಾಗೇ, ಬೆಂಗಳೂರಿನ  ಎಲ್ಲಾ ಆಂಗ್ಲ ಪತ್ರಿಕೆಗಳ ಪ್ರಸರಣ ಸಂಖ್ಯೆ ೬.೫೦ ಲಕ್ಷ. ಅದರಲ್ಲಿ ಅರ್ಧದಷ್ಟನ್ನು ಬಾಚಲು, ಅದರ ಲಕ್ಷ್ಯ. ಡಿಎನ್‌ಎ ಸದ್ದಿಗೆ ಈಗಲೇ ಅರೆಜೀವವಾಗಿರುವ ಡೆಕ್ಕನ್ ಹೆರಾಲ್ಡ್ ಬೆಚ್ಚಿ ಬಿದ್ದಿದೆ.
ಜಾಹೀರಾತು ಮಾರುಕಟ್ಟೆ ದೃಷ್ಟಿಯಿಂದ ಬೆಂಗಳೂರಿಗೆ ಅಗ್ರ ಸ್ಥಾನವಿದೆ. ಹೀಗಾಗಿಯೇ ಎಲ್ಲರಿಗೂ ಬೆಂಗಳೂರಿನ ಬಗ್ಗೆ ಅಕ್ಕರೆ. ಜಾಹೀರಾತು ಮಾರುಕಟ್ಟೆಯಲ್ಲಿ ಮುಂಬಯಿ, ದಿಲ್ಲಿ ಬಿಟ್ಟರೆ ಬೆಂಗಳೂರಿಗೆ ಮೂರನೇ ಸ್ಥಾನ. ಬೆಂಗಳೂರಿನಲ್ಲಿ ವಾರ್ಷಿಕ ೫೦೦ ಕೋಟಿಗೂ ಅಕ ಜಾಹೀರಾತು ವಹಿವಾಟು ನಡೆಯುತ್ತದೆ. ಮುಂಬಯಿನಲ್ಲಿ ಮೂರುಪಟ್ಟು ಅಂದರೆ ೧೫೦೦ ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ.  ಜನರಿಗೆ ಅರಿವು ಆನಂದ ನೀಡುವುದಕ್ಕಿಂತಲೂ, ಇಲ್ಲಿನ ಜಾಹೀರಾತು ಮಾರುಕಟ್ಟೆಯನ್ನು ಗಮದಲ್ಲಿಟ್ಟುಕೊಂಡೇ ಡಿಎನ್‌ಎ ಥರದ ಪತ್ರಿಕೆಗಳು ಇತ್ತ ನುಗ್ಗುತ್ತಿವೆ.
ದಿ ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರೋನಿಕಲ್, ಬೆಂಗಳೂರ್ ಮಿರರ್, ಮಿಡ್-ಡೇ, ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್‌ಪ್ರೆಸ್, ದಿ ಹಿಂದೂ ಪತ್ರಿಕೆಗಳಲ್ಲಿನ ಪ್ರತಿಭಾವಂತರನ್ನು ಹೆಕ್ಕಿ ತನ್ನ ಮಡಿಲಿಗೆ ಹಾಕಿಕೊಳ್ಳಲು ಡಿಎನ್‌ಎ ಮುಂದಾಗಿದೆ. ಮೂರು ಪಟ್ಟು ಹೆಚ್ಚಿನ ಸಂಬಳದ ಆಮಿಷಕ್ಕೆ ಪತ್ರಕರ್ತರು ಮರುಳಾಗುತ್ತಿದ್ದಾರೆ. ಪತ್ರಿಕಾಲಯಗಳಲ್ಲಿ ವಲಸೆ ಆರಂಭಗೊಂಡಿದೆ. ೧೫-೨೦ ಸಾವಿರ ಪಡೆಯುತ್ತಿದ್ದ ಪತ್ರಕರ್ತರಿಗೆ ೫೦-೬೦ ಸಾವಿರ ಸಂಬಳ ನೀಡಲು ಡಿಎನ್‌ಎ ಮುಂದಾಗಿದೆ. ಹಣ ಹಿಂಬಾಲಿಸುವ ಪತ್ರಕರ್ತರು, ಹಳೆಯ ಪತ್ರಿಕೆಗಳಿಗೆ ನಮಸ್ಕಾರ ಹಾಕಿ ಡಿಎನ್‌ಎ ಬಾಗಿಲಲ್ಲಿ ನಿಂತಿದ್ದಾರೆ. ಪತ್ರಿಕಾರಂಗ, ಉದ್ಯಮ(ಪತ್ರಿಕೋದ್ಯಮ)ವಾದ ಮೇಲೆ ಎಲ್ಲಾ ಕ್ಷೇತ್ರದಂತೆ ಇಲ್ಲೂ ಲಾಭ-ನಷ್ಟದ್ದೇ ಲೆಕ್ಕಾಚಾರ. ಈ ಅಬ್ಬರದಲ್ಲಿ ಸುದ್ದಿ ಮೌಲ್ಯ Out dated ಆಗಿದೆ. ಪತ್ರಕರ್ತರಿಗೆ ಒಳ್ಳೆಯ ಸಂಬಳ ಸಿಗುತ್ತಿದೆ ಎನ್ನುವುದಕ್ಕೆ ನನ್ನ ಖುಷಿಯಿದೆ. ಆದರೆ ಪತ್ರಕರ್ತರ ಕುದುರೆ ವ್ಯಾಪಾರದ ಬಗ್ಗೆ ನನ್ನದು ದೊಡ್ಡ ತಕರಾರು.
ಡಿಎನ್‌ಎ ಚರಿತೆ
ಡಿಎನ್‌ಎ(ಡೈಲಿ ನ್ಯೂಸ್ ಅಂಡ್ ಅನಾಲಿಸಿಸ್) ಎಂಬುದು ಇಂಗ್ಲಿಷ್ ದೈನಿಕ. ಮುಂಬಯಿ, ಅಹಮದಾಬಾದ್, ಸೂರತ್, ಪುಣೆ ಮತ್ತು ಜೈಪುರದಲ್ಲಿ ತನ್ನ ಆವೃತ್ತಿಗಳನ್ನು ಹೊಂದಿರುವ ಈ ಪತ್ರಿಕೆ ಆರಂಭಗೊಂಡಿದ್ದು ಜುಲೈ ೩೦, ೨೦೦೫. ಯುವ ಓದುಗರನ್ನು ಗುರಿ ಮಾಡಿಕೊಂಡ ಡಿಎನ್‌ಎ, ಭಾರತದ ವೇಗವಾಗಿ ಬೆಳೆಯುತ್ತಿರುವ ಆಂಗ್ಲ ಪತ್ರಿಕೆ ಪ್ರಮುಖವಾದುದು.
ದಿ ದೈನಿಕ್ ಭಾಸ್ಕರ್ ಸಮೂಹ ಮತ್ತು ಎಸ್ಸೆಲ್ ಸಮೂಹ ಸೇರಿದಂತೆ ಮಾಧ್ಯಮ ಲೋಕದ ನಾನಾ ಉದ್ಯಮಿಗಳು ಸೇರಿ ಮಾಡಿಕೊಂಡಿರುವ Diligent Media Corporation, ಡಿಎನ್‌ಎ ಪತ್ರಿಕೆಯ ಒಡೆತನವನ್ನು ಹೊಂದಿದೆ. ‘Speak up, it’s in your DNA’ ಘೋಷವಾಕ್ಯವನ್ನು ಜಾಹೀರಾತಿನಲ್ಲಿ ಬಿಂಬಿಸಿ, ಡಿಎನ್‌ಎ ಓದುಗರನ್ನು ಆಕರ್ಷಿಸಿದೆ.
ಆರಂಭದಲ್ಲಿ ಹತ್ತರಲ್ಲಿ ಹನ್ನೊಂದರಂತಿದ್ದ ಪತ್ರಿಕೆ ನೋಡನೋಡುತ್ತಲೇ ಬದಲಾಗಿದೆ. ದರ ಕಡಿತ, ಸ್ಪರ್ಧಾತ್ಮಕ ವಸ್ತು ವಿಶೇಷಗಳೊಂದಿಗೆ ಅದು ಜಾಗ ಮಾಡಿಕೊಂಡಿದೆ. ಸುರ್ ಅಗರ್ವಾಲ್, ಆರ್.ಜಗನ್ನಾಥನ್, ಸಿದ್ಧಾರ್ಥ್ ಭಾಟಿಯಾ, ವಿನಯ್ ಕಾಮತ್, ಮಾಳವಿಕಾ ಸಾಂಘ್ವಿ, ಶಿವ್ ವಿಶ್ವನಾಥನ್ ಡಿಎನ್‌ಎ ಪುಟಗಳಿಗೆ ಜೀವ ತುಂಬುತ್ತಿದ್ದಾರೆ. ಭಾರತದಲ್ಲಿ ಮೊದಲ ಭಾರಿಗೆ ಸಂಪೂರ್ಣ ವರ್ಣದ ಪುಟಗಳನ್ನು ನೀಡಿದ್ದು ಡಿಎನ್‌ಎ ಹೆಗ್ಗಳಿಕೆ.
ಐಆರ್‌ಎಸ್(ಇಂಡಿಯನ್ ರೀಡರ್‌ಶಿಪ್ ಸರ್ವೆ) ಪ್ರಕಾರ ಡಿಎನ್‌ಎ ಒಟ್ಟು  ಓದುಗರ ಸಂಖ್ಯೆ ೬,೭೬,೦೦೦. ಭಾರತದ ‘ಟಾಪ್ ೧೦’ ಆಂಗ್ಲ ಪತ್ರಿಕೆಗಳಲ್ಲಿ ಈ ಪತ್ರಿಕೆಗೆ ೮ನೇ ಸ್ಥಾನ. ಮುಂಬಯಿನ ಅತಿ ಹೆಚ್ಚು ಪ್ರಸರಣ ಪತ್ರಿಕೆಗಳಲ್ಲಿ ಡಿಎನ್‌ಎಗೆ ಎರಡನೇ ಸ್ಥಾನ. ೨೦೦೭ರಲ್ಲಿ ಮುಂಬಯಿನಲ್ಲಿ ಪತ್ರಿಕೆಯ ಪ್ರಸರಣ ಸಂಖ್ಯೆ ಡಿಎನ್‌ಎ ಹೇಳುವ ಪ್ರಕಾರ, ೪ಲಕ್ಷ. ಅಕ್ಟೋಬರ್ ೨೦೦೬ರಲ್ಲಿ ೩ ಲಕ್ಷವಿದ್ದ ಪ್ರಸರಣ, ಕೇವಲ ಒಂದೇ ವರ್ಷದಲ್ಲಿ ಒಂದು ಲಕ್ಷ ಪ್ರಸರಣ ಹೆಚ್ಚಿಸಿಕೊಳ್ಳುವುದು ಸುಲಭದ ಮಾತಲ್ಲ.  ಪತ್ರಿಕೆಯ ಸಂಪಾದಕ ಆರ್.ಜಗನ್ನಾಥನ್. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಭೇಟಿ ನೀಡಿ;
http://en.wikipedia.org/wiki/Daily_News_&_Analysis

ಒಂದಷ್ಟು ನ್ಯಾನೊ ಕತೆಗಳು

ಸಾಮಾನ್ಯ


ಸಂಜೆ ಊರಿಗೆ ಹೊರಟಿದ್ದ ನಾನು, ‘ರಾತ್ರಿ ೧೦ ಗಂಟೆ ಒಳಗೆ ಊರಲ್ಲಿ ಇರ್ತೀನಿ’ ಅಂತ ಅಮ್ಮನಿಗೆ ಹೇಳಿದ್ದೆ. ಆಫೀಸ್ ಕೆಲಸ ಬೇಗ ಮುಗಿಸಲು ಪರದಾಡುತ್ತಿರುವಾಗಲೇ ಮೊಬೈಲ್ ರಿಂಗಾಯಿತು. ಗೆಳತಿ ನಂಬರ್ ಮೊಬೈಲ್‌ನಲ್ಲಿ ಕಂಡ ತಕ್ಷಣ ಅದೇನೋ ಆನಂದ. ‘ಹಾಯ್ ಎಲ್ಲಿದ್ದೀ?’ ಅನ್ನುತ್ತಿರುವಾಗಲೇ, ‘ಏ ಗೂಬೆ ಹೊರಗೆ ಬಾ’ ಎಂದು ಫೋನ್ ಕಟ್ ಮಾಡಿದಳು. ಹೊರಬಂದರೆ ಸೋಪಾದಲ್ಲಿ ಕೂತಿದ್ದ ಗೆಳತಿ ‘ಹಾಯ್’ ಎಂದಳು. ಆ ಮಾತು ಈ ಮಾತಿನ ಮಧ್ಯೆ ‘ಈಗ ಪಿವಿಆರ್‌ನಲ್ಲಿ ಮನಸಾರೆ ಸಿನಿಮಾ ತೋರಿಸ್ತೀಯಾ?’ ಅಂದಳು. ಆಗ ಸಮಯ ಮೂರು ಗಂಟೆ. ಕಚೇರಿಯಿಂದ ಹೊರಟರೆ ೨೦ ನಿಮಿಷಕ್ಕೆ ಪಿವಿಆರ್ ತಲುಪಬಹುದು. ೩.೩೦ಕ್ಕೆ ಸಿನಿಮಾ ಆರಂಭ. ಏನೇನೋ ಕಾರಣಗಳನ್ನು ಪೋಣಿಸಿ ಅರ್ಧ ದಿನ ರಜೆ ಪಡೆದು ಮನಸಾರೆಗೆ ಹೊರಟೆವು. ಈ ಮಧ್ಯೆ ಅಮ್ಮನಿಗೆ ಕಾಲ್ ಮಾಡಿ, ‘ಸ್ವಲ್ಪ ಲೇಟಾಗಿ ಬರ್ತೀನಿ.. ಗಾಬರಿಯಾಗಬೇಡ’ ಎಂದು ತಿಳಿಸಿದ್ದೆ. ಸಿನಿಮಾ, ಲೈಟಾಗಿ ಊಟ ಮುಗಿಸಿ ಬಸ್ ಹತ್ತುವ ವೇಳೆಗೆ ರಾತ್ರಿ ೧೧ ಗಂಟೆ. ಊರಲ್ಲಿ ನಮ್ಮದು ಒಂಟಿ ಮನೆ. ಬಸ್ ಇಳಿದು ಮಗ ಹೇಗೆ ಬರ್ತಾನೋ ಎಂಬ ದಿಗಿಲು ಅಮ್ಮನಿಗೆ. ಅಂತೂ ಮನೆ ತಲುಪಿದಾಗ ಬೆಳಗಿನ ಜಾವ ೪ ಗಂಟೆ. ಬಾಗಿಲನ್ನು ಮೆಲುವಾಗಿ ತಟ್ಟಿದೆ. ‘ಓ ಬಂದ್ಯಾ?’ ಅನ್ನುತ್ತಾ ಅಮ್ಮ ಬಾಗಿಲು ತೆಗೆದಳು. ನನಗಾಗಿ ಕಾಯುತ್ತಾ ರಾತ್ರಿಯಿಡೀ ಆಕೆ ಸೋಪಾದಲ್ಲಿಯೇ ಕೂತಿದ್ದಳು. ‘ಯಾಕೆ ಲೇಟಾಯಿತು?’ ಎನ್ನುವ ಅಮ್ಮನ ಪ್ರಶ್ನೆಗೆ ಉತ್ತರ ಹೇಳಲು ಕಷ್ಟವಾಗಿ, ‘ಹೊಟ್ಟೆ ಹಸಿಯುತ್ತಿದೆ’ ಎನ್ನುತ್ತಾ ಅಡುಗೆಮನೆಗೆ ನುಗ್ಗಿದೆ.

ದೇವರಿಗೆ ನಮಸ್ಕಾರ ಹಾಕಿದ ನಂಜುಂಡಸ್ವಾಮಿ ಹೆಬ್ಬಾಳದಲ್ಲಿ ಬಸ್‌ಗೆ ಕಾಯುತ್ತಾ ನಿಂತ. ಬಂದ ಬಸ್‌ಗಳೆಲ್ಲ ಅವತ್ತು ಖಾಲಿ ಖಾಲಿ. ಹೀಗಾದರೆ ಬ್ಯುಸಿನೆಸ್ ಕತೆಯೇನು? ಎಂದು ಯೋಚಿಸುತ್ತಲೇ ಮನೆ ದೇವರು ಹನುಮಂತರಾಯನ ನೆನಪಿಸಿಕೊಂಡ. ಅಷ್ಟರಲ್ಲಿಯೇ ಒಂದು ತುಂಬಿದ ಬಸ್ ಬಂತು. ಬಸ್ ಹತ್ತಿದ ಎರಡೇ ನಿಮಿಷಕ್ಕೆ ಒಂದು ಮೊಬೈಲ್ ಎಗರಿಸಿದ. ಮೊಬೈಲ್ ಕಳೆದುಕೊಂಡಿದ್ದವನು ಹಿಡಿಶಾಪ ಹಾಕುತ್ತಿದ್ದ. ಅವನ ಬೈಗುಳದ ಮಧ್ಯೆ ‘ಸೂಳೆ ಮಗ’ ಅನ್ನೋದು ಕಿವಿಗೆ ಬಿತ್ತು. ಆಗ ಜಿನುಗಿದ ಕಣ್ಣೀರಿನ ಹನಿಯನ್ನು ಕಷ್ಟಪಟ್ಟು ನಂಜುಂಡಸ್ವಾಮಿ ಬಚ್ಚಿಟ್ಟುಕೊಂಡ.

ಡಾಕ್ಟರ್ ಕೈಚೆಲ್ಲಿದ್ದರು. ‘ವೆಂಟಿಲೇಟರ್ ಇರೋದರಿಂದ ನಿಮ್ಮಪ್ಪ ಉಸಿರಾಡುತ್ತಿದ್ದಾರೆ. ಬದುಕುವ ಚಾನ್ಸೇ ಇಲ್ಲ. ಸುಮ್ಮನೇ ದುಡ್ಡು ವೇಸ್ಟ್ ಮಾಡಬೇಡಿ. ವೆಂಟಿಲೇಟರ್ ತೆಗೆದುಬಿಡೋಣ. ಸೆಂಟಿಮೆಂಟ್ ಒಳ್ಳೆಯದಲ್ಲ’ ಎಂದು ಡಾಕ್ಟರ್ ಯಾವುದೇ ಭಾವಗಳಿಲ್ಲದೇ ಮಾತನಾಡುತ್ತಿದ್ದರು. ಈಗಾಗಲೇ ಹಣ ನೀರಿನಂತೆ ಖರ್ಚಾಗಿದೆ. ಇನ್ಮುಂದೆ ದಿನಕ್ಕೆ ೧೫-೨೦ ಸಾವಿರ ಬೇಕು. ಸಾಲ ಕೊಡೋರ ಪಟ್ಟಿ ಮೊಟಕಾಗುತ್ತಿದೆ. ನಾಳೆ ಬೆಳಗ್ಗೆ ೧೫ ಸಾವಿರ ಕಟ್ಟಬೇಕು. ಸದ್ಯಕ್ಕೆ ಜೇಬಲ್ಲಿ ಹಣವಿದೆ. ಆದರೆ ನಾಡಿದ್ದು? ಆಚೆ ನಾಡಿದ್ದು? ಪ್ರಶ್ನೆಗೆ ಉತ್ತರ ಇಲ್ಲ. ಹಾಗೆಂದು ವೆಂಟಿಲೇಟರ್ ತೆಗೆಯಿರಿ ಎಂದು ವೈದ್ಯರಿಗೆ ಹೇಳಲು ಮನಸ್ಸು ಬರುತ್ತಿಲ್ಲ. ಏನೋ ಪಾಪಪ್ರಜ್ಞೆ. ನಮ್ಮ ಕಷ್ಟವು ಪ್ರಜ್ಞೆ ಇಲ್ಲದೇ ಮಲಗಿದ್ದ ಅಪ್ಪನಿಗೆ ಕಾಣಿಸಿತೋ ಏನೋ, ಮಾರನೇ ದಿನ ವೆಂಟಿಲೇಟರ್ ಇದ್ದರೂ ಅವರು ಉಸಿರು ನಿಲ್ಲಿಸಿದ್ದರು!

ಆಕೆಯ ಹೆಸರು ನನಗಂತೂ ಗೊತ್ತಿಲ್ಲ. ಹೂವಜ್ಜಿ ಎಂದೇ ಅಮ್ಮ ಕರೆಯುತ್ತಾಳೆ. ಆಕೆ ಎಂದಿನಂತೆ ಮನೆ ಬಾಗಿಲಲ್ಲಿ ಹೂವಿಟ್ಟು ಹೊರಟಳು. ಆ ಹೂವನ್ನು ಅಮ್ಮನ ಕೈಯಲ್ಲಿಟ್ಟೆ. ‘ಹೂವು ಬಾಡಿವೆ. ಕಳ್ಳಮುಂಡೆ ದಿನಾ ಇದೇ ಆಯಿತು..’ ಎಂದು ಅವಳು ಗೊಣಗಿದಳು. ಹೂವು ಬಾಡಿದ್ದೋ ಇಲ್ಲವೋ, ನನಗೆ ಆಕ್ಷಣ ಹೂವಜ್ಜಿಯ ಕೈಬೆರಳುಗಳು ಕಣ್ಮುಂದೆ ಬಂದವು. ಆಕೆಯ ಬೆರಳುಗಳು ಹೂವನ್ನು ಕಟ್ಟಿ, ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿದ್ದು ನೆನಪಾಯಿತು.

ಕಂಬಳಿ ಅಡಿಯಲ್ಲಿ ಚಳಿಯಲ್ಲಿ ಮುದುಡಿ ಮಲಗಿದ್ದಾಗ ಏನೇನೋ ನೆನಪಾಯಿತು. ಆ ಮಧುರ ಯಾತನೆಯ ಮೆಲುಕು ಹಾಕುತ್ತಾ, ಅದರಲ್ಲಿಯೇ ಸುಖ ಹೊಂದುತ್ತಿರುವಾಗಲೇ ಹಾಳಾದ ನಿದ್ದೆ ಎಲ್ಲವನ್ನೂ ಕಸಿದಿತ್ತು. ಆ ಕ್ಷಣಗಳಿಗಾಗಿ ಕಂಬಳಿ ಮೇಲೆ ಕಂಬಳಿ ಹೊದ್ದರೂ ಫಲ ದೊರೆತಿಲ್ಲ. ಚಳಿಯೂ ಕಡಿಮೆಯಾಗಿಲ್ಲ.

============================

‘ಕನಸಿನರಮನೆ ’ಯ ವಿಳಾಸ ಬದಲಾಗಿದೆ!

ಅಕ್ಷರ ಪ್ರೇಮಿಗಳಿಗೆ ನಮಸ್ಕಾರ.

ಬ್ಲಾಗ್‌ಸ್ಪಾಟ್‌ನಲ್ಲಿದ್ದ ‘ಕನಸಿನರಮನೆ ’ ಇಲ್ಲಿಗೆ ತಂದಿದ್ದೇನೆ. ನನ್ನ ಹಳೆಯ ಬರಹಗಳಿಗಾಗಿ ದಯಮಾಡಿ ಭೇಟಿ ನೀಡಿ:http://kanasinaramane.blogspot.com/